ಕಟ್ಟತ್ತಿಲ ಮಠ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ಸ್ಥಳ. ಇದು ಉಡುಪಿಯ ಅದಮಾರು ಮಠದ ಆಡಳಿತಕ್ಕೊಳಪಟ್ಟಿದೆ. ಈ ಮಠದಲ್ಲಿ ಮಧ್ವಚಾರ್ಯರು ಪ್ರತಿಷ್ಥಾಪಿಸಿದ ಕೃಷ್ಣನನ್ನು ಆರಾಧಿಸುತ್ತಾರೆ. ಕಟ್ಟತ್ತಿಲ ಮಠವು ಮಂಗಳೂರಿನ ವಿಟ್ಲ ಸಮೀಪದ ಸಾಲೆತ್ತೂರು ಎಂಬಲ್ಲಿದೆ. = ಇತಿಹಾಸ = ಕಟ್ಟತ್ತಿಲ ಮಠಕ್ಕೆ ಸುಮಾರು ೭೦೦ ವರ್ಷಗಳ ಇತಿಹಾಸವಿದೆ. ಈ ಸ್ಥಳಕ್ಕೆ ಮಧ್ವಚಾರ್ಯರು ಕಡೆಯದಾಗಿ ಭೇಟಿ ನೀಡಿದ್ದರು. ಮಧ್ವಚಾರ್ಯರ ಸಂಚಾರದ ಕೊನೆಯ ಸ್ಥಳವಾದ ಕಾರಣ ಇಲ್ಲಿಗೆ ಕಡ್ತಿಲ ಎಂದು ಕರೆಯುತ್ತಿದ್ದರು. ಕಡ್ತಿಲ ಎಂಬ ಹೆಸರು ಕ್ರಮೇಣ ಕಟ್ಟತ್ತಿಲ ಎಂದಾಯಿತು. = ವಿಶೇಷತೆ = ಮಠದ ಸಮೀಪದಲ್ಲಿ ಪುಸ್ತಕ ತೀರ್ಥವಿದೆ. ಇಲ್ಲಿ ಮಧ್ವಚಾರ್ಯರು ತಮ್ಮ ಸಿದ್ಧಾಂತಗಳನ್ನು ತಾಮ್ರದ ಹಾಳೆಗಳಲ್ಲಿ ಬರೆದು ಮಣ್ಣಿನಡಿಯಲ್ಲಿ ಇಟ್ಟಿದ್ದಾರೆಂಬ ನಂಬಿಕೆ ಇದೆ. ಪುಸ್ತಕ ತೀರ್ಥದ ಹತ್ತಿರದಲ್ಲಿ ನಾಗಸಾನಿಧ್ಯವಿದೆ. ವಾದಿರಾಜರೂ ಈ ಮಠಕ್ಕೆ ಭೇಟಿ ನೀಡಿದ್ದಾರೆಂಬ ಕುರುಹಾಗಿ ವಾದಿರಾಜರ ಶಿಷ್ಯರನ್ನು ಭೂತರಾಜ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ಇಲ್ಲಿನ ದೇವರಿಗೆ ಹಾಲು ಪಾಯಸ ಮತ್ತು ಸಿಹಿ ಅವಲಕ್ಕಿ ಪ್ರಿಯವಾದ ನೈವೇದ್ಯ. = ಆಡಳಿತ = ಕಟ್ಟತ್ತಿಲ ಮಠವು ಉಡುಪಿಯ ಅದಮಾರು ಮಠದ ಆಡಳಿತಕ್ಕೊಳಪಟ್ಟಿದೆ. ಗೋಪಾಲಕೃಷ್ಣ ಸೇವಾ ಸಂಘದವರು ಮಠದ ನಿರ್ವಹಣೆಯನ್ನು ಮಾಡುತ್ತಿದ್ದಾರೆ. = ವಿಶೇಷ ಆಚರಣೆಗಳು = ವಿಷು ಸಂಕ್ರಮಣ ಶ್ರೀಕೃಷ್ಣ ಜನ್ಮಾಷ್ಟಮಿ ವರ್ಷಾವಧಿ ಉತ್ಸವ = ಮಾರ್ಗ ಸೂಚಿ = ಮಂಗಳೂರಿನಿಂದ ಸುಮಾರು ೩೦ಕಿಮೀ ದೂರದಲ್ಲಿದೆ. ವಿಟ್ಲದಿಂದ ಮುಡಿಪು ಮಾರ್ಗದ ನಡುವೆ ಸಾಲೆತ್ತೂರು ಎಂಬ ಊರಿನಲ್ಲಿ ಕಟ್ಟತ್ತಿಲ ಮಠವಿದೆ. = ಉಲ್ಲೇಖ = ಮಂಗಳೂರು ವಿಭಾಗದ ಪ್ರಜಾವಾಣಿ ದಿನ ಪತ್ರಿಕೆ(೩೦ ಜುಲೈ,ಕರಾವಳಿ ಪುರವಣಿ)